ಒರಿಸ್ಸದಲ್ಲಿ ಆಳಿದ ಸೂರ್ಯವಂಶದ ಗಜಪತಿ ಅರಸನಾದ ಪ್ರತಾಪರುದ್ರದೇವನ ಸೇನಾಪತಿ. ಸು. 1540 ರಲ್ಲಿ ಅರಸ ಮರಣ ಹೊಂದಿದ ಬಳಿಕ ಆತನ ಇಬ್ಬರು ಮಕ್ಕಳಾದ ಕಲುವದೇವ ಮತ್ತು ಕಖರವದೇವರನ್ನು ಕೊಲ್ಲಿಸಿ ಗಜಪತಿ ರಾಜ್ಯವನ್ನು ಗೋವಿಂದ ಆಕ್ರಮಿಸಿದ. ಇದು ನಡೆದದ್ದು 1541ರ ಸೆಪ್ಟೆಂಬರ್ ಮತ್ತು 1542ರ ಸೆಪ್ಟೆಂಬರ್ ನಡುವೆ ಎಂಬುದು ಪುರಿಯ ಜಗನ್ನಾಥ ದೇವಾಲಯದಲ್ಲಿಯ ಶಾಸನವೊಂದರಿಂದ ತಿಳಿದುಬರುತ್ತದೆ.

ಬಂಗಾಳದಲ್ಲಿ ಸುಲ್ತಾನನಾದ ಅಲಾವುದೀನ್ ಹುಸೇನ್ ಷಹ ಆಳುತ್ತಿದ್ದಾಗ, ಸು. 1508-09 ರಲ್ಲಿ ಶಾಹ ಇಸ್ಮಾಯಿಲ್ ಫಾಜಿ಼ ಒರಿಸ್ಸದ ಮೇಲೆ ದಂಡೆತ್ತಿ, ಪುರಿಯ ಜಗನ್ನಾಥ ಮತ್ತು ಇತರ ದೇವಾಲಯಗಳನ್ನು ಭಗ್ನಗೊಳಿಸಿ ಅಲ್ಲಿಯ ಸಂಪತ್ತನ್ನು ದೋಚಿದ. ಇದೇ ಸಮಯದಲ್ಲಿ ಪ್ರತಾಪರುದ್ರ ವಿಜಯನಗರದ ಕೃಷ್ಣದೇವರಾಯನ ವಿರುದ್ಧ ದಂಡೆತ್ತಿದ. ಆದರೆ ಈ ವಿಷಯವನ್ನರಿತ ಕೂಡಲೇ ರಾಜಧಾನಿಗೆ ಹಿಂದಿರುಗಿದ. ಹಿಮ್ಮೆಟ್ಟಿದ್ದ ಶತ್ರುಸೇನೆಯನ್ನು ಬೆನ್ನಟ್ಟಿ ಹೂಗ್ಲಿ ಜಿಲ್ಲೆಯ ಮಾಂದಾರನ್ ಕೋಟೆಯನ್ನು ಮುತ್ತಿದನಾದರೂ ಈತನ ಸೇನಾನಿಯಾದ ಗೋವಿಂದನ ಮೋಸಕ್ಕೆ ಸಿಲುಕಿ ಶಾಹನೊಡನೆ ಒಪ್ಪಂದ ಮಾಡಿಕೊಂಡು ಹಿಂದಿರುಗಬೇಕಾಯಿತು.

ಇದೇ ಗೋವಿಂದನೇ ಅನಂತರ ಪ್ರತಾಪರುದ್ರನ ಮಕ್ಕಳನ್ನು ಕೊಲೆಮಾಡಿ ತಾನೇ ಒರಿಸ್ಸದಲ್ಲಿ ಆಳತೊಡಗಿದ. ಈ ಹೆಚ್ಚಿನ ವಿವರಗಳು ನಮಗೆ ತಿಳಿದಿರುವುದು ಜಗನ್ನಾಥ ದೇವಾಲಯದ ವೃತ್ತಾಂತವೆನಿಸಿದ ಮಾದಲಾಪಾಂಜಿಯಿಂದ ಮಾತ್ರ. ಈತ ಸುಮಾರು 7 ವರ್ಷಗಳ ಕಾಲ ಆಳಿದ. ಈತನ ಬಳಿಕ ಈತನ ಮಗನೂ ಇವನ ಇಬ್ಬರು ಮಕ್ಕಳೂ ಅನುಕ್ರಮವಾಗಿ 1559 ರವರೆಗೆ ಆಳಿದರು. ಈತ ಭೋಯಿ ಮನೆತನಕ್ಕೆ ಸೇರಿದವನು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ